Important
Trending

ಆಡಳಿತ ವ್ಯವಸ್ಥೆಯಿಂದ ಸರ್ವಾಧಿಕಾರ ಆರೋಪ: ಮತದಾನ ಬಹಿಷ್ಕರಿಸಿದ ನಾಗರಿಕರು: ಸಚಿವ ಮಂಕಾಳ್ ವೈದ್ಯರ ವಿರುದ್ಧ ಪರೋಕ್ಷವಾಗಿ ಅಸಮಾಧಾನ

ಹೊನ್ನಾವರ: ಸ್ಥಳೀಯ ಪರಿಸರ ಮತ್ತು ಮೀನುಗಾರರ ಹಿತದ ಕಡಗಣನೆಯ ವಿರುದ್ದ ಮತ್ತು ಕಾಸರಕೋಡ ಟೋಂಕಾ ಜನರ ಹಕ್ಕುಗಳನ್ನು ದಮನಿಸಲಾಗುತ್ತಿರುವ ಆಡಳಿತ ವ್ಯವಸ್ಥೆ ಸರ್ವಾಧಿಕಾರ ಮತ್ತು ಅನ್ಯಾಯವನ್ನು ಖಂಡಿಸಿ, ಹೊನ್ನಾವರ ಕಾಸರಕೋಡ ಟೋಂಕಾ ನಾಗರಿಕರು ಮೇ 7 ರಂದು ನಡೆಯುವ ಚುನಾವಣೆಯನ್ನು ಬಹಿಸ್ಕರಿಸಿದ್ದಾರೆ. ನಮಗೆ ನ್ಯಾಯ ಸಿಗುವವರೆಗೆ ನಾವು ಮತದಾನ ಮಾಡುವುದಿಲ್ಲಾ ಎಂದು ಗ್ರಾಮಸ್ಥರು ಸಭೆ ನಡೆಸಿ ತಿರ್ಮಾನ ಕೈಗೋಂಡಿದ್ದು, ಕರಾವಳಿಯ ಮೀನುಗಾರರ ಕಾರ್ಮಿಕರ ಸಂಘದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಲಾಯಿತು.

ಕಾಸರಕೋಡ ಟೋಂಕಾ ಕರಾವಳಿಯ ಮೀನುಗಾರರ ಕಾರ್ಮಿಕರ ಸಂಘದ ಸಭಾಂಗಣದಲ್ಲಿ ಗ್ರಾಮಸ್ಥರ ಪರವಾಗಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಹೋರಾಟ ಸಮೀತಿಯ ಅಧ್ಯಕ್ಷ ರಾಜೇಶ ತಾಂಡೇಲ, ತಾವು ಜಿಲ್ಲಾ ಆಡಳಿತಕ್ಕೆ,ಸರ್ಕಾರಕ್ಕೆ ಮತ್ತು ಚುನಾವಣಾ ಆಯೋಗಕ್ಕೆ ನೀಡಿರುವ ಮನವಿಗಳಿಗೆ ಈ ವರೆಗೆ ಯಾವದೇ ಸ್ಪಂದನೆ ದೊರೆತಿಲ್ಲವಾದ್ದರಿಂದ ನಮ್ಮ ಕಾಸರಕೋಡ ಟೊಂಕ ಗ್ರಾಮದ ಮೀನುಗಾರರು ಈ ಬಾರಿಯ ಲೋಕಸಭಾ ಚುನಾವಣೆಯನ್ನು ಭಹಿಷ್ಕರಿಸಲು ಸಭೆ ಸೇರಿ ತೀರ್ಮಾನಿಸಿದ್ದೇವೆ ಎಂದರು.

ನಮ್ಮ ಕ್ಷೇತ್ರದ ಶಾಸಕರೂ ಆಗಿರುವ ಮೀನುಗಾರಿಕೆ ಸಚಿವ ಮಂಕಾಳವೈದ್ಯರು ಹಿಂದೆ ವಿರೋಧ ಪಕ್ಷದಲ್ಲಿರುವಾಗ ಮೀನುಗಾರರ ಪರವಾಗಿ ಹೋರಾಟದ ಮುಂಚೂಣಿಯಲ್ಲಿದ್ದರು. ಆದರೆ ಅವರು ಸಚಿವರಾಗುತ್ತಿದ್ದಂತೆ ವಾಣಿಜ್ಯ ಬಂದರು ವಿಚಾರದಲ್ಲಿ ತಟಸ್ಥರಿದ್ದಂತೆ ಕಂಡುಬoದರೂ ಅವರ ಅಸಹಾಯಕ ನಡೆಯು ನಮ್ಮ ಭಾಗದ ಮೀನುಗಾರರಿಗೆ ಆಶ್ಚರ್ಯ ಮೂಡಿಸಿದೆ.

ನಾವು ಇತ್ತೀಚಿಗೆ ಅವರನ್ನು ಭೇಟಿ ಮಾಡಿ ಸಹಾಯ ಕೇಳಿದ ಸಂದರ್ಭದಲ್ಲಿ ದೇಶಪಾಂಡೆಯವರ ಹತ್ತಿರ ವಾಣಿಜ್ಯ ಬಂದರು ಯೋಜನೆಯನ್ನು ಕೈಬಿಡುವ ಬಗ್ಗೆ, ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲು ಹೇಳಿ ಎಂದಿದ್ದರು. ಅವರು ಹೇಳಿದ ಪ್ರಕಾರ ನಮ್ಮ ನಿಯೋಗವು ದೇಶಪಾಂಡೆಯವರನ್ನು ಭೇಟಿಮಾಡಿ ಅವರ ಸಹಾಯವನ್ನು ಕೇಳಿದ್ದೇವೆ. ಮುಖ್ಯ ಮಂತ್ರಿಗಳೊoದಿಗೆ ಚರ್ಚಿಸುವ ಭರವಸೆ ಅವರಿಂದ ಸಿಕ್ಕಿದೆ ಎಂದರು.

ಮೀನುಗಾರ ಮುಕಂಡ ಗಣಪತಿ ತಾಂಡೇಲ್ ಮಾತನಾಡಿ , ಜಿಲ್ಲೆಯ ಮೀನುಗಾರ ಪ್ರಮುಖರ ಜಂಟಿ ನಿಯೋಗವು ಮೇ 3 ರಂದು ಜಿಲ್ಲೆಗೆ ಭೇಟಿ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಕುಮಟಾದಲ್ಲಿ ಭೇಟಿಮಾಡಿ ಜಿಲ್ಲೆಯ ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಅವರ ಗಮನಸೆಳೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಕರಾವಳಿಯ ಮೂರು ಜಿಲ್ಲೆಗಳ ಮೀನುಗಾರರ ಪ್ರಮುಖರು ಇತ್ತೀಚೆಗೆ ಹೊನ್ನಾವರದ ಕಾಸರಕೋಡಿನಲ್ಲಿ ಸಭೆ ಸೇರಿ ಕೆಲವು ಮಹತ್ವದ ತೀರ್ಮಾನ ತೆಗೆದುಕೊಂಡಿದೇವೆ ಎಂದರು. ಈ ಸಂದರ್ಭದಲ್ಲಿ ಮೀನುಗಾರ ಮುಕಂಡರು ಗ್ರಾಮಸ್ಥರು ಸಾರ್ವಜನಿಕರು ಇದ್ದರು.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ

Back to top button